ಯಕ್ಷಗಾನಕ್ಕೆ ಸೂಕ್ತ ಪ್ರೋತ್ಸಾಹ ಅಗತ್ಯ : ಪೇಜಾವರ ಶ್ರೀ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಸೋಮವಾರ, ನವ೦ಬರ್ 10 , 2014
|
ನವ೦ಬರ್ 10, 2014
|
ಯಕ್ಷಗಾನಕ್ಕೆ ಸೂಕ್ತ ಪ್ರೋತ್ಸಾಹ ಅಗತ್ಯ : ಪೇಜಾವರ ಶ್ರೀ
ಬೆಂಗಳೂರು :
ಕೇರಳದಲ್ಲಿ ಕಥಕ್ಕಳಿಯನ್ನು ಪ್ರೋತ್ಸಾಹಿಸುತ್ತಿರುವಂತೆ ಯಕ್ಷಗಾನವನ್ನು ಪ್ರೋತ್ಸಾಹಿಸಬೇಕು ಎಂದು ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ರಾಜ್ಯ ಸರಕಾರವನ್ನು ಒತ್ತಾಯಿಸಿದರು.
ಯಕ್ಷಗಾನ ಕಲಾರಂಗ ಸಂಸ್ಥೆಯ 40ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಭಾನುವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಏರ್ಪಡಿಸಿದ್ದ 'ಕಲಾವಿದರಿಗೆ ಅಭಿಮಾನದ ಸಮ್ಮಾನ, ಯಕ್ಷಗಾನ ಪ್ರದರ್ಶನ' ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
''ಯಕ್ಷಗಾನ ಮತ್ತು ಬಯಲಾಟ ಕಲೆ ಕರಾವಳಿಗೆ ಮಾತ್ರ ಸೀಮಿತವಾಗದೆ ರಾಜ್ಯವೇ ಹೆಮ್ಮೆಪಡುವಂತಹ ಶ್ರೀಮಂತ ಸಾಂಪ್ರದಾಯಿಕ ಕಲೆ ಎನಿಸಿದೆ. ಆದರೆ, ಇದಕ್ಕೆ ಸರಕಾರದಿಂದ ಅಗತ್ಯ ಪ್ರೋತ್ಸಾಹ ಹಾಗೂ ನೆರವು ಸಿಗಬೇಕಿದೆ. ಯಕ್ಷಗಾನ ಕೇವಲ ಒಂದು ಕಲೆಯಲ್ಲ. ಅನೇಕ ಕಲೆಗಳ ಸಮುಚ್ಚಯ. ಹಾಗಾಗಿ ಇದು ಕಲೆಗಳ ಸಂಕಲನ,''ಎಂದು ಅಭಿಪ್ರಾಯಪಟ್ಟರು.
ಸಚಿವೆ ಉಮಾಶ್ರೀ ಮಾತನಾಡಿ, ''ಯಕ್ಷಗಾನ ಕಲೆಗೆ ಪ್ರತ್ಯೇಕ ಅಕಾಡೆಮಿ ತೆರೆಯಬೇಕು, ಕಲಾರಂಗ ಟ್ರಸ್ಟ್ಅನ್ನು ಶಾಶ್ವತ ಅನುದಾನಕ್ಕೆ ಒಳಪಡಿಸಬೇಕು ಎಂಬ ನಾನಾ ಬೇಡಿಕೆಗಳನ್ನು ಸಂಸ್ಥೆ ಸರಕಾರದ ಮುಂದಿಟ್ಟಿದೆ. ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳಿಗೆ ಅನುದಾನ ನೀಡುವ ಬಗ್ಗೆ ಪರಿಶೀಲಿಸಲಾಗುವುದು,'' ಎಂದು ತಿಳಿಸಿದರು. ''ಸಂಘಟನೆ ಕೊರತೆಯಿಂದ ಇಂದು ಸಣ್ಣಾಟ, ದೊಡ್ಡಾಟ, ಪೌರಾಣಿಕ ನಾಟಕಗಳು, ಬಯಲಾಟಗಳು ನಶಿಸುತ್ತಿವೆ. ಯಕ್ಷಗಾನ ಕಲಾವಿದರಲ್ಲಿ ಸಂಘಟನೆ ಇರುವುದರಿಂದ ಕಲೆಗೆ ರಾಷ್ಟ್ರಮಟ್ಟದಲ್ಲಿ ಮನ್ನಣೆ ದೊರೆತಿದೆ,'' ಎಂದು ಶ್ಲಾಘಿಸಿದರು.
ಗಣ್ಯ ವ್ಯಕ್ತಿಗಳ ಸ್ಮರಣಾರ್ಥ ಸ್ಥಾಪಿಸಲಾಗಿರುವ 'ಯಕ್ಷಗಾನ ಕಲಾರಂಗ ಪ್ರಶಸ್ತಿ'ಯನ್ನು 13 ಮಂದಿಗೆ, ಗಣ್ಯ ವ್ಯಕ್ತಿಗಳ ಗೌರವಾರ್ಥ ಸ್ಥಾಪಿಸಲಾಗಿರುವ 'ಯಕ್ಷಗಾನ ಕಲಾರಂಗ ಪ್ರಶಸ್ತಿ'ಯನ್ನು 3 ಮಂದಿಗೆ ಹಾಗೂ ಯಕ್ಷಗಾನ ಕಲಾರಂಗದ ಹಿರಿಯ ಕಾರ್ಯಕರ್ತ ಕೆ.ಗೋಪಾಲ ಅವರಿಗೆ 'ಯಕ್ಷ ಚೇತನ' ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಅಧ್ಯಕ್ಷ ನಾಡೋಜ ಬೆಳಗಲ್ಲು ವೀರಣ್ಣ, ಶಾಸಕ ಪ್ರಮೋದ್ ಮಧ್ವರಾಜ್, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುಂಡಲೀಕ ಹಾಲಂಬಿ, ಮಾಜಿ ಶಾಸಕ ಕೆ.ರಘುಪತಿ ಭಟ್, ಕಲಾರಂಗದ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಸೇರಿದಂತೆ ಪ್ರಮುಖರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕೃಪೆ :
http://www.vijaykarnataka.com
|
|
|